-ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ಅದು ಪ್ರವಾಸೋದ್ಯಮ ನಗರ ಎಂಬ ಖ್ಯಾತಿಯನ್ನು ಹೊಂದಿರುವ ದಾಂಡೇಲಿ ನಗರವನ್ನು ಪ್ರವೇಶ ಮಾಡುವಾಗ ಸಿಗುವ ಮೊದಲ ಪ್ರದೇಶ. ಜಿಲ್ಲೆ, ಹೊರ ಜಿಲ್ಲೆ, ರಾಜ್ಯ, ಹೊರ ರಾಜ್ಯ, ದೇಶ ವಿದೇಶಗಳಿಂದ ಬರುವ ಪ್ರವಾಸಿಗರನ್ನು ನಗರಕ್ಕೆ ಸ್ವಾಗತಿಸುವ ರಸ್ತೆ ಎಂದರೆ ತಪ್ಪಾಗಲಾರದು. ಆದರೇನು? ಈ ರಸ್ತೆಯಲ್ಲಿ ಪ್ರವಾಸಿಗರನ್ನು ಹಾಗೂ ಇನ್ನಿತರ ಪ್ರಯಾಣಿಕರನ್ನು ಬಿಡಾಡಿ ದನ ಕರುಗಳೇ ಸ್ವಾಗತಿಸುವ ರೀತಿಯಲ್ಲಿರುವುದು ಮಾತ್ರ ಇಲ್ಲಿಯ ದುರ್ದೈವ.
ಕಳೆದ ಕೆಲವು ವರ್ಷಗಳಿಂದ ಈ ರಸ್ತೆಯಲ್ಲಿ ಬಿಡಾಡಿ ದನಗಳು ಅತ್ತಿಂದಿತ್ತ ಓಡಾಡುತ್ತಾ, ಸುಗಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇನ್ನೂ ಜನಸಂದಣಿ ಹಾಗೂ ವಾಹನ ದಟ್ಟಣೆ ಇರುವ ಈ ರಸ್ತೆಯಲ್ಲಿ ಸಾಕಷ್ಟು ಬಾರಿ ಬಿಡಾಡಿ ದನ ಕರುಗಳು ಅವಘಡಕ್ಕೆ ತುತ್ತಾಗಿ ಗಂಭೀರ ಗಾಯಗೊಂಡಿರುವ ಉದಾಹರಣೆಗಳು ಇದೆ. ಬಿಡಾಡಿ ಆಕಳು ಇಲ್ಲಿಯ ರಸ್ತೆ ಬದಿಯಲ್ಲಿ ಕರುವನ್ನು ಹಾಕುತ್ತಿರುವುದಕ್ಕೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ಆಗತಾನೆ ಹುಟ್ಟಿದ ಕರುಗಳು ಬೀದಿನಾಯಿಗಳ ದಾಳಿಗೊಳಗಾಗದೆ ಇರಲಿ ಎಂಬ ಕಾರಣಕ್ಕೆ ಸ್ಥಳೀಯರು ಅದನ್ನು ರಕ್ಷಣೆ ಮಾಡುತ್ತಿದ್ದಾರೆ.
ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ವಿದ್ಯಾರ್ಥಿಗಳು ಭಯದಿಂದಲೇ ನಡೆದಾಡಿಕೊಂಡು ಹೋಗಬೇಕಾದ ಸ್ಥಿತಿಯಿದೆ. ಕಾರಣ ಬಹಳಷ್ಟು ಸಲ ಬಿಡಾಡಿ ದನ ಕರುಗಳು ವಿದ್ಯಾರ್ಥಿಗಳನ್ನು, ಮಕ್ಕಳನ್ನು ಅಟ್ಟಾಡಿಸಿಕೊಂಡು ಬಂದಿದ್ದು ಇದೆ. ಸುಗಮ ಸಂಚಾರ ಹಾಗೂ ಮಕ್ಕಳು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಇಲ್ಲಿ ವ್ಯಾಪಕವಾಗಿ ಇರುವ ಬಿಡಾಡಿ ದನ ಕರುಗಳ ನಿಯಂತ್ರಣಕ್ಕೆ ಸಂಬಂಧಪಟ್ಟವರು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸ್ಥಳೀಯರು ಸೋಮವಾರ ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.